Skip to main content

ಇದು ರಣಹದ್ದಿನ ವ್ಯಥೆ...

ಊರಿನಲ್ಲಿದ್ದಾಗ ಮನೆಯೆದುರು ವಿಶಾಲವಾದ ಗೋಮಾಳವಿತ್ತು. ಹಗಲೂ ರಾತ್ರಿ ಜಾನುವಾರುಗಳ ಹಿಂಡು ಮೇಯುತ್ತಿರುತ್ತಿದ್ದವು. ಒಮ್ಮೆ ದನಗಳಿಗೆ ಅದೇನೋ ಖಾಯಿಲೆ ವಕ್ಕರಿಸಿಕೊಂಡಿತು( ಬಹುಶಃ ಕಾಲುಬಾಯಿ ರೋಗವಿರಬೇಕು) ಪ್ರತೀ ಮನೆಯಲ್ಲೂ ದನಗಳು ಒಂದರ ಹಿಂದೊಂದರಂತೆ ಸಾಯತೊಡಗಿದವು. ಸತ್ತ ದನಗಳನ್ನು ಹುಗಿಯುವವಷ್ಟು ವ್ಯವಧಾನವಿಲ್ಲದ ಜನ ಅವುಗಳನ್ನು ಹೊತ್ತು ತಂದು ಗೋಮಾಳದ ಮೂಲೆಯಲ್ಲಿದ್ದ ಸ್ಮಶಾನದಲ್ಲಿ ದೊಡ್ಡ ಮರವೊಂದರ ಕೆಳಗೆ ಎಸೆಯತೊಡಗಿದರು. ಒಂದಾ...! ಎರಡಾ...! ಹತ್ತಾರು ದನಗಳ ಕಳೇಬರಗಳು ಕೊಳೆತು ನಾರತೊಡಗಿದವು. ಆ ದಾರಿಯಲ್ಲಿ ಓಡಾಡುವುದೇ ದುಸ್ತರವಾಯಿತು. ಒಂದು ಬೆಳಿಗ್ಗೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲವರು ಗುಂಪುಗೂಡಿ ದನಗಳನ್ನು ಎಸೆದಿದ್ದ ಕಡೆಗೆ ಕುತೂಹಲದಿಂದ ನೋಡತೊಡಗಿದರು. ಗುಂಪಿನೊಳಗೆ ನಾವೂ ಸೇರಿಕೊಂಡೆವು. ಕಳೇಬರಗಳ ಸುತ್ತ ನಾವು ಅಲ್ಲಿಯವರೆಗೂ ನೋಡಿಯೇ ಇರದ ದೊಡ್ಡ ದೊಡ್ಡ ಪಕ್ಷಿಗಳು ಸುತ್ತುವರಿದು ಕೊಳೆತ ಮಾಂಸವನ್ನು ತಮ್ಮ ದೊಡ್ಡ ಗಾತ್ರದ ಕೊಕ್ಕಿನಿಂದ ಕುಕ್ಕಿ ತಿನ್ನತೊಡಗಿದ್ದವು. ಗುಂಪಿನಲ್ಲಿದ್ದ ಯಾರೋ ಅಗ್ಗಗ್ಗಾ... ಎಂದು ಬಾಯಿ ಮಾಡಿದರು. ಒಮ್ಮೆಲೇ ಹತ್ತಾರು ಪಕ್ಷಿಗಳು ಛತ್ರಿಯಂತಹ ರೆಕ್ಕೆಗಳನ್ನು ಹರಡಿಕೊಂಡು ನಭಕ್ಕೆ ನೆಗೆದವು. ಅಬ್ಬಾ!! ಅದೆಂಥಾ ರೆಕ್ಕೆಗಳು.!! ಆ ಕಾಲಕ್ಕೆ ಅಷ್ಟು ದೊಡ್ಡ ಪಕ್ಷಿಯನ್ನೇ ಕಂಡಿರದ ನಮಗೆ ಇವೇನು ಹಕ್ಕಿಗಳೋ!? ಹಕ್ಕಿಗಳ ರೂಪದ ರಾಕ್ಷಸರೋ...!? ಎನಿಸಿಬಿಟ್ಟಿತು. ಅಂಥಾ ಗಾತ್ರ.! ಅವತ್ತಿಗೆ ಚಿಕ್ಕ ಹುಡುಗರಾದ ನಮಗೆ ತಿಳಿದದ್ದು ಇವೇ ರಣಹದ್ದುಗಳು ಎಂದು.
ಆ ನಂತರ ಒಂದು ವಾರ ಯುದ್ದಕ್ಕೆ ಬಂದ ಯೋಧರಂತೆ ನೂರಾರು ರಣಹದ್ದುಗಳು ಅಲ್ಲಿಯೇ ಗುಂಪುಗೂಡಿದವು. ಕೊಳೆತ ದನಗಳನ್ನೆಲ್ಲಾ ತಿಂದು ಇಡೀ ಪರಿಸರವನ್ನು ವಾಸನೆಯಿಂದ ಮುಕ್ತಗೊಳಿಸಿದವು. ಅಂದಹಾಗೆ ರಣಹದ್ದುಗಳು ಸುಂದರ ಪಕ್ಷಿಗಳಲ್ಲ. ಅವುಗಳ ದೇಹದ ಮೇಲ್ಮೈ ಒಂತರಾ ಕೊಳಕು ಹಿಡಿದಂತೆ ಕಾಣುತ್ತವೆ. ಕೊಳೆತ ಮಾಂಸವನ್ನೇ ತಿನ್ನುವುದರಿಂದ ಅವೂ ಸ್ವಚ್ಛವಾಗಿ ಕಾಣುವುದಿಲ್ಲವೇನೋ...
 ಅಲ್ಲಿಂದ ಅವು ತೆರಳಿದ ನಂತರ ಹದ್ದುಗಳನ್ನು ನಾನು ಮತ್ತೆಲ್ಲೂ ಕಾಣಲಿಲ್ಲ.
ರಣಹದ್ದುಗಳು ವಲಸೆ ಪಕ್ಷಿಗಳು ಎನ್ನುತ್ತಾರೆ. ಇತ್ತೀಚೆಗೆ ಸತ್ತ ದನಗಳನ್ನು ಎಸೆಯುವುದು ಕಡಿಮೆಯಾದ್ದರಿಂದಲೋ, ಅಥವಾ ಅವುಗಳಿಗೆ ಆಹಾರದ ಕೊರತೆಯೋ ಇಲ್ಲಾ ಹವಾಮಾನ ವೈಪರೀತ್ಯದ ಹೊಡೆತ ಉಳಿದೆಲ್ಲಾ ಪಕ್ಷಿಗಳಂತೆ ಅವುಗಳನ್ನೂ ಬಾಧಿಸುತ್ತಿದೆಯೋ ಅಂತೂ ರಣಹದ್ದುಗಳು ಕಾಣುತ್ತಿಲ್ಲ. ಜೊತೆಗೆ
ಜಾನುವಾರುಗಳಲ್ಲಿ ನೋವು ನಿವಾರಕ ಔಷಧ ಡೈಕ್ಲೋಫಿನಾಕ್ ಬಳಕೆಯಲ್ಲಿತ್ತು. ಹಿಂದೆ ಯತೇಚ್ಚವಾಗಿ ಅದನ್ನು ಬಳಸುತ್ತಿದ್ದರು. ಇದರಿಂದ ಅನಾರೋಗ್ಯ ಪೀಡಿತವಾಗಿ, ಚಿಕಿತ್ಸೆಗೆ ಒಳಪಟ್ಟು  ಸತ್ತ ಜಾನುವಾರುಗಳಲ್ಲಿ ಈ ಅಂಶ ಅದರ ಮಾಂಸಖಂಡಗಳಲ್ಲಿ ಇರುತ್ತಿತ್ತು. ಅವುಗಳು ಸತ್ತ ನಂತರ ಅವನ್ನು ತಿಂದ  ರಣಹದ್ದುಗಳಲ್ಲಿ ಡೈಕ್ಲೋಫಿನಾಕ್ ವಿಷಕಾರಿಯಾಗಿ( nephrotoxic) ಪರಿಣಮಿಸಿ ಕಿಡ್ನಿ ವೈಪಲ್ಯಕ್ಕೆ ಒಳಗಾಗಿ ಮರಣ ಹೊಂದಿದವು ಎಂದು ಕೆಲವು ಸಂಶೋದನೆಗಳು ಧೃಡಪಡಿಸಿವೆ.(ಇದನ್ನು  ಎಲ್ಲರೂ ಪೂರ್ಣ ಅರ್ಥೈಸಿಕೊಳ್ಳುವುದು ಕಷ್ಟ).  ಇದು ತಿಳಿದ ನಂತರ diclofenac ಔಷದವನ್ನು ಪಶುಚಿಕಿತ್ಸೆಗೆ ನಿಷೇಧಿಸಲಾಯಿತು.ಆದರೆ ಕಾಲ ಮಿಂಚಿದಂತೆ ಕಂಡುಬರುತ್ತಿದೆ. ಅವುಗಳ ಸಂತತಿ ಬಹುತೇಕ ಅಳಿವಿನಂಚಿನಲ್ಲಿದೆ.

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...