Skip to main content

ವಿಶ್ವ ಜಲದಿನ


ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...? 

ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ. 


ಎರಡನೇ ಮುಖ್ಯ ಕಾರಣ ಮಲೆನಾಡಿನಲ್ಲಿ ರೈತರು ಸಾಮೂಹಿಕವಾಗಿ ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದು.

ಮಲೆನಾಡಿನ ಭತ್ತ ಮಳೆಯಾಶ್ರಿತ ಬೆಳೆ, ಇದಕ್ಕೆ ಹೊರಗಿನಿಂದ ನೀರು ಹಾಯಿಸಿ ಭತ್ತ ಬೆಳೆಯುವ ಅಗತ್ಯವಿಲ್ಲ. ಮಲೆನಾಡಿನ ಗದ್ದೆಗಳು ಒಂದುರೀತಿಯ Natural reservoir. ಸುರಿಯುವ ಮಳೆಯನ್ನೆಲ್ಲಾ ತನ್ನೊಳಗೆ ಹಿಡಿದಿಟ್ಟುಕೊಂಡು ಭತ್ತದ ಪೈರಿನ ಜೊತೆಗೆ ಜಲಮೂಲಗಳೂ ಹುಲುಸಾಗಿರುವಂತೆ ನೋಡಿಕೊಳ್ಳುತ್ತವೆ. ಗದ್ದೆಗಳು ಸಣ್ಣಸಣ್ಣ ಕೆರೆಗಳಂತೆ ನೀರುಹಿಡಿದಿಟ್ಟುಕೊಂಡು ತಿಂಗಳುಗಟ್ಟಲೆ ನಿಧಾನಕ್ಕೆ ಭೂಮಿಯೊಳಕ್ಕೆ ನೀರಿಳಿಸುತ್ತಾ, ಹೆಚ್ಚುವರಿ ನೀರನ್ನು ಗದ್ದೆಬಯಲಿನ ಬದಿಯಲ್ಲಿ ಹರಿಯುವ ಸಣ್ಣ ಹಳ್ಳ ಅಥವಾ ತೊರೆಗಳಿಗೆ ಬಿಡುತ್ತಾ ತೊರೆಗಳು ಜೀವಂತವಿರುವಂತೆ ನೋಡಿಕೊಳ್ಳುತ್ತವೆ, ಇತ್ತ ತೊರೆಯು ಬಿರುಇಸಿಲಿನಲ್ಲಿಯೂ ತೆಳ್ಳಗೆ ಹರಿಯುತ್ತಾ ತಾನು ಸೇರುವ ಹೊಳೆಯನ್ನು ಬತ್ತದಂತೆ ಕಾಪಿಡುತ್ತದೆ. ಒಂದಕ್ಕೊಂದು ಕೊಂಡಿಯಾಗಿರುವ ಈ ಜಲ ಪೂರಣ ವ್ಯವಸ್ಥೆ ಬೇಸಿಗೆಯಲ್ಲೂ ಭೂಮಿಯು ಬಸವಳಿಯದಂತೆ ನೋಡಿಕೊಳ್ಳುತ್ತದೆ. 


ಆದರೆ ಹತ್ತು ವರ್ಷಗಳಿಂದೀಚೆಗೆ ನಿಧಾನಕ್ಕೆ ಭತ್ತದ ಬೆಳೆ ಮರೆಯಾಗುತ್ತಾ ಬಂತು, ಬಹುತೇಕ ಗದ್ದೆ ಪ್ರದೇಶಗಳು ಪಾಳು ಬಿದ್ದವು. ಇನ್ನುಳಿದ ಭಾಗದಲ್ಲಿ ಭತ್ತದ ಜಾಗಕ್ಕೆ ಪರಿಸರ ಮಾರಕ ಶುಂಠಿ ಬಂದು ಕೂತು ಜಲವ್ಯವಸ್ಥೆಯ ಜೊತೆಗೆ ಅಮೂಲ್ಯ ಜಲಚರಗಳನ್ನೂ ಕೊಂದು ಹಾಕಿತು. ಗದ್ದೆಗಳು ಬೀಳು ಬಿದ್ದ ಪರಿಣಾಮ ನೀರು ಎಲ್ಲೂ ನಿಲ್ಲದೇ ಮಳೆ ಸುರಿದಾಗೆಲ್ಲಾ ಸೀದಾ ಹೊಳೆಯ ಕಡೆ ನುಗ್ಗಿ ಹರಿದುಹೋಯಿತು. ಇತ್ತೀಚೆಗಂತೂ ಭತ್ತದ ಬೆಳೆ ತನ್ನ ಮಿತಿಮೀರಿದ ಬೇಸಾಯದ ವೆಚ್ಚ ಹಾಗೂ ಕಾರ್ಮಿಕರ ಕೊರತೆಯಿಂದಾಗಿ, ಆನೆಯಂತಹ ಕಾಡುಪ್ರಾಣಿಗಳ ನಿರಂತರ ಹಾವಳಿಯಿಂದಾಗಿ ತನ್ನ  ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಸಾಗಿದೆ. ಬಹುತೇಕ ಗದ್ದೆಗಳೆಲ್ಲಾ ಕಾಫಿ, ಅಡಿಕೆ ತೋಟಗಳಾಗಿವೆ. ಇನ್ನು ನೀರು ನಿಲ್ಲುವುದೆಲ್ಲಿಂದ ಬಂತು.!? 

ಬೋರ್ ವೆಲ್ ಎಂದರೇನೆಂದೇ ಇತ್ತೀಚಿನವರೆಗೂ ತಿಳಿದಿರದ ಮೂಡಿಗೆರೆಯಂತಹ ಮಲೆನಾಡಿನ ಊರುಗಳಲ್ಲೀಗ ಬೋರ್ ಲಾರಿಗಳದೇ ಸದ್ದು...

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...