Skip to main content

ವಿಶ್ವ ಜಲದಿನ


ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...? 

ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ. 


ಎರಡನೇ ಮುಖ್ಯ ಕಾರಣ ಮಲೆನಾಡಿನಲ್ಲಿ ರೈತರು ಸಾಮೂಹಿಕವಾಗಿ ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದು.

ಮಲೆನಾಡಿನ ಭತ್ತ ಮಳೆಯಾಶ್ರಿತ ಬೆಳೆ, ಇದಕ್ಕೆ ಹೊರಗಿನಿಂದ ನೀರು ಹಾಯಿಸಿ ಭತ್ತ ಬೆಳೆಯುವ ಅಗತ್ಯವಿಲ್ಲ. ಮಲೆನಾಡಿನ ಗದ್ದೆಗಳು ಒಂದುರೀತಿಯ Natural reservoir. ಸುರಿಯುವ ಮಳೆಯನ್ನೆಲ್ಲಾ ತನ್ನೊಳಗೆ ಹಿಡಿದಿಟ್ಟುಕೊಂಡು ಭತ್ತದ ಪೈರಿನ ಜೊತೆಗೆ ಜಲಮೂಲಗಳೂ ಹುಲುಸಾಗಿರುವಂತೆ ನೋಡಿಕೊಳ್ಳುತ್ತವೆ. ಗದ್ದೆಗಳು ಸಣ್ಣಸಣ್ಣ ಕೆರೆಗಳಂತೆ ನೀರುಹಿಡಿದಿಟ್ಟುಕೊಂಡು ತಿಂಗಳುಗಟ್ಟಲೆ ನಿಧಾನಕ್ಕೆ ಭೂಮಿಯೊಳಕ್ಕೆ ನೀರಿಳಿಸುತ್ತಾ, ಹೆಚ್ಚುವರಿ ನೀರನ್ನು ಗದ್ದೆಬಯಲಿನ ಬದಿಯಲ್ಲಿ ಹರಿಯುವ ಸಣ್ಣ ಹಳ್ಳ ಅಥವಾ ತೊರೆಗಳಿಗೆ ಬಿಡುತ್ತಾ ತೊರೆಗಳು ಜೀವಂತವಿರುವಂತೆ ನೋಡಿಕೊಳ್ಳುತ್ತವೆ, ಇತ್ತ ತೊರೆಯು ಬಿರುಇಸಿಲಿನಲ್ಲಿಯೂ ತೆಳ್ಳಗೆ ಹರಿಯುತ್ತಾ ತಾನು ಸೇರುವ ಹೊಳೆಯನ್ನು ಬತ್ತದಂತೆ ಕಾಪಿಡುತ್ತದೆ. ಒಂದಕ್ಕೊಂದು ಕೊಂಡಿಯಾಗಿರುವ ಈ ಜಲ ಪೂರಣ ವ್ಯವಸ್ಥೆ ಬೇಸಿಗೆಯಲ್ಲೂ ಭೂಮಿಯು ಬಸವಳಿಯದಂತೆ ನೋಡಿಕೊಳ್ಳುತ್ತದೆ. 


ಆದರೆ ಹತ್ತು ವರ್ಷಗಳಿಂದೀಚೆಗೆ ನಿಧಾನಕ್ಕೆ ಭತ್ತದ ಬೆಳೆ ಮರೆಯಾಗುತ್ತಾ ಬಂತು, ಬಹುತೇಕ ಗದ್ದೆ ಪ್ರದೇಶಗಳು ಪಾಳು ಬಿದ್ದವು. ಇನ್ನುಳಿದ ಭಾಗದಲ್ಲಿ ಭತ್ತದ ಜಾಗಕ್ಕೆ ಪರಿಸರ ಮಾರಕ ಶುಂಠಿ ಬಂದು ಕೂತು ಜಲವ್ಯವಸ್ಥೆಯ ಜೊತೆಗೆ ಅಮೂಲ್ಯ ಜಲಚರಗಳನ್ನೂ ಕೊಂದು ಹಾಕಿತು. ಗದ್ದೆಗಳು ಬೀಳು ಬಿದ್ದ ಪರಿಣಾಮ ನೀರು ಎಲ್ಲೂ ನಿಲ್ಲದೇ ಮಳೆ ಸುರಿದಾಗೆಲ್ಲಾ ಸೀದಾ ಹೊಳೆಯ ಕಡೆ ನುಗ್ಗಿ ಹರಿದುಹೋಯಿತು. ಇತ್ತೀಚೆಗಂತೂ ಭತ್ತದ ಬೆಳೆ ತನ್ನ ಮಿತಿಮೀರಿದ ಬೇಸಾಯದ ವೆಚ್ಚ ಹಾಗೂ ಕಾರ್ಮಿಕರ ಕೊರತೆಯಿಂದಾಗಿ, ಆನೆಯಂತಹ ಕಾಡುಪ್ರಾಣಿಗಳ ನಿರಂತರ ಹಾವಳಿಯಿಂದಾಗಿ ತನ್ನ  ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಸಾಗಿದೆ. ಬಹುತೇಕ ಗದ್ದೆಗಳೆಲ್ಲಾ ಕಾಫಿ, ಅಡಿಕೆ ತೋಟಗಳಾಗಿವೆ. ಇನ್ನು ನೀರು ನಿಲ್ಲುವುದೆಲ್ಲಿಂದ ಬಂತು.!? 

ಬೋರ್ ವೆಲ್ ಎಂದರೇನೆಂದೇ ಇತ್ತೀಚಿನವರೆಗೂ ತಿಳಿದಿರದ ಮೂಡಿಗೆರೆಯಂತಹ ಮಲೆನಾಡಿನ ಊರುಗಳಲ್ಲೀಗ ಬೋರ್ ಲಾರಿಗಳದೇ ಸದ್ದು...

Comments

Popular posts from this blog

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...