Skip to main content

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ. 

ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು. 


ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!? 

ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ

ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ? 


ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊಲ, ನಮ್ಮ ಗದ್ದೆ ಸಮೃದ್ಧವಾಗಬೇಕಿತ್ತಲ್ಲವಾ!?  ದಿನ ದಿನಕ್ಕೂ ಔಷಧಿಯುಂಡು ನಳನಳಿಸಬೇಕಿದ್ದ ಭೂಮಿಯು ಯಾಕೆ ರೋಗಗ್ರಸ್ಥವಾಗುತ್ತಾ ಸಣ್ಣದೊಂದು ಕೀಟ ದಾಳಿಯನ್ನೂ ಎದುರಿಸಲಾರದಷ್ಟು ನಿಶ್ಯಕ್ತವಾಗಿ ಹೋಗಿದೆ !? 

ಉತ್ತರವನ್ನು ಬೂತಗನ್ನಡಿ ಹಾಕಿ ಹುಡುಕಬೇಕಿಲ್ಲ. ನಾವು ಭೂಮಿಗೆ ಹಾಕಿರುವ ರಾಸಾಯನಿಕಗಳೇ ಉತ್ತರ.! 

ಈ ವಿಷದ ಬಾಟಲಿಯ ಮುಚ್ಚು ತೆಗೆದು ಒಂದು ಸೆಕೆಂಡ್ ಮೂಗಿನ ಬಳಿ ಹಿಡಿದು ಉಸಿರೆಳೆದುಕೊಂಡರೆ, ತಲೆ ಸುತ್ತಿ ಬಂದು   ದೇಹ ಬಳಲಿದಂತಾಗುವ ದ್ರವವನ್ನು ಔಷಧಿಯೆಂದು ವರ್ಷವಿಡೀ ಮಣ್ಣಿಗೆ ಸಿಂಪಡಿಸಿದರೆ ಕ್ರಿಮಿ, ಕೀಟಗಳೆಲ್ಲುಳಿದಾವು! 

ಹೇಗೆ ಮಣ್ಣಿನ ಮೇಲೊಂದು ಜೀವ ಜಗತ್ತಿದೆಯೋ ಹಾಗೆಯೇ ಮಣ್ಣಿನ ಒಳಗಿನದ್ದೂ ಕೂಡಾ ಒಂದು ಜಗತ್ತೇ... ಅಲ್ಲಿ ಅಸಂಖ್ಯಾತ ಕ್ರಿಮಿಗಳ ನಡುವೆ ನಡೆಯುವ ಯುದ್ಧವೇ ಜೈವಿಕ ಕ್ರಿಯೆ. ಕೃಷಿ ಭೂಮಿಯೊಳಗೆ ಹೇಗೆ ಬೆಳೆಗಳನ್ನು ತಿಂದು ಬದುಕುವ ಕೀಟಗಳಿವೆಯೋ ಹಾಗೆಯೇ ಆ ಕೀಟಗಳನ್ನು ತಿಂದು ಕೃಷಿ ವ್ಯವಸ್ಥೆಯನ್ನು ಕಾಪಾಡುವ ಜೀವಿಗಳೂ ಅಸಂಖ್ಯಾತವಾಗಿವೆ. ಈ ಕೀಟಗಳ ಬಡಿದಾಟದಲ್ಲಿ ಐದರಿಂದ ಹತ್ತು ಪರ್ಸೆಂಟ್ ನಷ್ಟು ಫಸಲು ಮಣ್ಣು ಪಾಲಾಗುವುದು ಪ್ರಕೃತಿ ನಿಯಮ, ಆದರೆ ಸಕಲವೂ ತನ್ನದೇ, ಸಮಸ್ತವೂ ತನಗೇ ದಕ್ಕಬೇಕೆಂಬ ದುರಾಸೆಗೆ ಬೀಳುವ ರೈತ ಕೀಟನಾಶಕವೆಂಬ ಹೆಸರಿನ ವಿಷವನ್ನು ತನ್ನ ಫಸಲಿಗೆ ಹಾನಿ ಮಾಡಿದ ಕೀಟವನ್ನು ಕೊಲ್ಲುತ್ತೇನೆನ್ನುವ ಕುರುಡುತನದಲ್ಲಿ ತನ್ನ ಭೂಮಿಯನ್ನು ಕಾಯುವ ಕ್ರಿಮಿ ಕೀಟಗಳನ್ನೂ ಕೊಂದು ಹಾಕುತ್ತಾನೆ. 


ಔಷಧ ದಂಧೆಯೆಂಬುದು(ದೇಹ, ಮಣ್ಣು ಎರಡರದ್ದೂ) ದೇಶದ ಅತ್ಯಂತ ದೊಡ್ಡ ಲಾಭದಾಯಕ ದಂಧೆಯಾಗಿರುವ ಹೊತ್ತಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಇಲಾಖೆಗಳು ನೈಸರ್ಗಿಕ ಕೃಷಿಯ ಉಪಯೋಗ ಹಾಗೂ ಲಾಭದ ರಹಸ್ಯವನ್ನು ಮರೆಮಾಚಿ, ಆಧುನಿಕ ಕೃಷಿ ಪದ್ದತಿಯೇ ಶ್ರೇಷ್ಠ ಎಂಬ ಭ್ರಮೆಗೆ ರೈತರನ್ನು ದೂಡಿ ನಿಸರ್ಗದ ಜೈವಿಕ ವ್ಯವಸ್ಥೆಗೇ ಬೆಂಕಿಯಿಟ್ಟಿವೆ. ಈ ವಿನಾಶಕಾರಿ ಪದ್ದತಿಗೆ 'ಹಸಿರು ಕ್ರಾಂತಿ' ಎಂಬ ಚೆಂದದ ಹೆಸರು ಬೇರೆ.! 

ಇತ್ತ, ಹೆಚ್ಚೆಚ್ಚು ಬೆಳೆಯುವ ಹುಚ್ಚಿಗೆ ಬಿದ್ದಿರುವ ರೈತ ಹೊಸ ಹೊಸ ಹೆಸರಿನಲ್ಲಿ, ಬಾಟಲಿಯಲ್ಲಿ ಮಾರುವ ವಿಷವನ್ನು ಸಂಭ್ರಮಕ್ಕೆ ಬಿದ್ದಂತೆ ಸಿಂಪಡಿಸುತ್ತಾ ತನ್ನ ಭೂಮಿಯನ್ನು ಕಾಯುವ ಜೀವಿಗಳನ್ನೂ ಕೊಲ್ಲುತ್ತಿದ್ದಾನೆ. ಜೊತೆಗೆ ಆತನ ಸಮೃದ್ಧ ಫಸಲನ್ನು ತಿನ್ನುವ ಮನುಷ್ಯರನ್ನೂ...! 

ಚಿಕ್ಕವರಿದ್ದಾಗ ಚಳಿಗಾಲದ ದಿನಗಳಲ್ಲಿ ಬಿಸಿಲೇರುವ ತನಕ ಅಂಗಳಕ್ಕೆ ಕಾಲಿಡಲು ವಿಪರೀತ ಭಯ. ಕಾರಣ ಆ ಋತುವಿನಲ್ಲಿ ಎರೆಹುಳುಗಳೆಲ್ಲಾ ಮಣ್ಣಿನಿಂದಾಚೆಗೆ ಬಂದು ಎಲ್ಲೆಂದರಲ್ಲಿ‌ ರಾಶಿಯಾಗಿ  ಹರಿದಾಡುತ್ತಿದ್ದವು. ಎರೆಹುಳುಗಳು ನೆಲದ ಸಮೃದ್ಧಿಯ ಪ್ರತೀಕ. 

ಇತ್ತೀಚಿನ ದಿನಗಳಲ್ಲಿ ಎರೆಹುಳುಗಳನ್ನು ಎಲ್ಲಿಯಾದರೂ ಕಂಡಿದ್ದೀರಾ ? ದಿನವೂ ಕಾಣುತ್ತಿದ್ದರೆ ನೀವು ಅದೃಷ್ಟವಂತರು ಹಾಗೂ ಸ್ವಸ್ಥ ಕೃಷಿಯಲ್ಲಿ ತಡಗಿಕೊಂಡಿದ್ದೀರೆಂದರ್ಥ. 

ಇತ್ತೀಚೆಗೆ ಎರೆಹುಳುಗಳು ಕಾಣುತ್ತಿಲ್ಲವೆಂದಾದರೆ ಅದಕ್ಕೆ ಕಾರಣ ಮತ್ತದೇ ' ಆಧುನಿಕ‌ ಕೃಷಿಯ ಔಷಧಿಗಳು'!

Comments

Popular posts from this blog

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...