ಕೆಲವು ತಿಂಗಳ ಹಿಂದೆ ಫೇಸ್ಬುಕ್ ಸ್ನೇಹಿತರೊಬ್ಬರು ತಮ್ಮ ಹೊಸ ಪುಸ್ತಕದ ಬಗ್ಗೆ ಬರೆದುಕೊಂಡಿದ್ದರು. ಹೆಸರೇ ಒಂದು ರೀತಿ ವಿಶಿಷ್ಟವಾಗಿದ್ದುದರಿಂದ 'ಪುಸ್ತಕ ಎಲ್ಲಿ ಸಿಗುತ್ತದೆ?' ಎಂದು ಕೇಳಿದೆ. ಸಧ್ಯಕ್ಕೆ ಇ-ಬುಕ್ ನಲ್ಲಿದೆ ಓದಿ ಅಂದರು, ನನಗೆ ಇ-ಬುಕ್ ಆಗಿ ಬರುವುದಿಲ್ಲ ಪೇಪರ್ ಬ್ಯಾಕ್ (ಪುಸ್ತಕ) ಇದ್ದರೆ ಹೇಳಿ, ಅಂದೆ. ಸಧ್ಯಕ್ಕೆ ಪ್ರಿಂಟ್ ಆಗಿಲ್ಲ, ಆದಾಗ ತಿಳಿಸುತ್ತೇನೆ ಅಂದವರು ಮೊನ್ನೆ ಕಳುಹಿಸಿದ್ದಾರೆ. ಇವತ್ತು ಮನೆಗೆ ಬಂದಾಗ ಪುಸ್ತಕ ಟೀಫಾಯಿಯ ಮೇಲಿತ್ತು. ಓದಲು ಪ್ರಾರಂಭಿಸಿದ್ದೇನೆ, ನಿಜಕ್ಕೂ ಅದ್ಭುತವಾದ ಕಂಟೆಂಟ್.
ಪುಸ್ತಕದ ಬಗ್ಗೆ ಪೂರ್ತಿ ಓದಿದ ಮೇಲೆ ಬರೆಯುತ್ತೇನೆ. ಈಗ ಹೇಳ ಹೊರಟಿದ್ದು ಆ ವಿಚಾರವನ್ನಲ್ಲ. ಇತ್ತೀಚೆಗೆ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತಾ "ನನಗೆ ಈ ಕಿಂಡಲ್, ಇ-ಬುಕ್ ಗಳಲ್ಲಿ ಓದಲಾಗುವುದಿಲ್ಲ ಮಾರಾಯ್ರೇ.. ಕೈಯ್ಯಲ್ಲಿ ಪುಸ್ತಕ ಹಿಡಿದು ಓದಿದರೆ ಮಾತ್ರ ಓದಿದ್ಹಂಗೆ ಅನಿಸುತ್ತೆ, ಹೀಗಾಗಿ ನನಗೆ ಪುಸ್ತಕವೇ ಹಿತ." ಅಂದಿದ್ದೆ. ಅದಕ್ಕವರು, ನೀವೇನ್ರೀ ಇನ್ನೂ ಯಾವ ಕಾಲದಲ್ಲಿದೀರೀ!? ಕನ್ನಡ ಸಾಹಿತ್ಯ ತಾಂತ್ರಿಕವಾಗಿ ಶ್ರೀಮಂತವಾಗಬೇಕೆಂದು ತೇಜಸ್ವಿಯವರೇ ಹೇಳಿದ್ದರು, ನೀವು ನೋಡಿದ್ರೆ ಅದೇ ಹಳೇ ಕತೆ ಹೇಳ್ತಿದೀರಲಾ... ಅಂದರು.
ಇದೊಳ್ಳೆ ಕತೆಯಾಯಿತಲ್ಲ! ನಾನು ತಾಂತ್ರಿಕವಾಗಿ ಶ್ರೀಮಂತವಾಗಬಾರದು ಅಂತೆಲ್ಲಿ ಹೇಳಿದೆ!?
ನನಗೆ ವೈಯಕ್ತಿಕವಾಗಿ, ಓದಲು ಪುಸ್ತಕವೇ ಇಷ್ಟ ಅಷ್ಟೇ ಅಂದುಕೊಂಡು ಮತ್ತೆ ಆ ವಾದವನ್ನು ಮುಂದುವರಿಸಲು ಹೋಗಲಿಲ್ಲ.
ಕನ್ನಡ ಸಾಹಿತ್ಯವು ಹೊಸತನಗಳಿಗೆ ತೆರೆದುಕೊಳ್ಳಬೇಕೆಂದು ಆಶಿಸುವವರಲ್ಲಿ ನಾನ್ಯಾವತ್ತಿಗೂ ಮೊದಲಿಗ. ಹೊಸ ಹೊಸ ಸಾಧ್ಯತೆಗಳಲ್ಲಿ ಸಾಹಿತ್ಯವನ್ನು ಆಸ್ವಾದಿಸುವ ಓದುಗರು ಹೆಚ್ಚುತ್ತಿರುವಾಗ ನಾವು ಅವರದೇ ಆಯ್ಕೆಯಲ್ಲಿ ಸಾಹಿತ್ಯವನ್ನು ನೀಡಬೇಕು. ಪೇಪರ್ ಬ್ಯಾಕ್, ಇ-ಬುಕ್, ಆಡಿಯೋ ಬುಕ್ ಗಳು ವಿಶಿಷ್ಟ ಆಯ್ಕೆಗಳು. ಯಾರಿಗೆ ಯಾವುದು ಅಪ್ಯಾಯವೋ ಅವರದನ್ನು ಆಯ್ದುಕೊಳ್ಳುತ್ತಾರೆ. ಹಾಗೆಂದು, ತಂತ್ರಜ್ಞಾನ ಬೆಳೆಯುತ್ತಿದೆ, ಮುದ್ರಣ ವೆಚ್ಚ ಹೆಚ್ಚುತ್ತಿದೆ ಹಾಗಾಗಿ ಈ ಆಯ್ಕೆ ಹಳೆಯದಾಯಿತು ಇದನ್ಜು ನಿಲ್ಲಿಸಿ ಬಿಡೋಣ ಎಂದರೆ ನಿಜಕ್ಕೂ ಅದು ದಡ್ಡತನ. ನಿಲ್ಲಿಸಿದರೆ, ಪುಸ್ತಕದ ಆಯ್ಕೆಯನ್ನೇ ಸದಾ ಇಟ್ಟುಕೊಂಡಿರುವ ಓದುಗರ ವರ್ಗವನ್ನು ನಿಶ್ಚಿತವಾಗಿ ಕಳೆದುಕೊಳ್ಳಬೇಕಾದೀತು.!
ಹೀಗಾಗಿ ಸಾಹಿತ್ಯವನ್ನು ಎಲ್ಲಾ ಆಯ್ಕೆಗಳಿಗೂ ತೆರೆದಿಡುವುದು ನಿಜಕ್ಕೂ ಬರಹಗಾರನ, ಪ್ರಕಾಶಕನ ಜಾಣತನ. ಜೊತೆಗೆ ಎಲ್ಲಾ ಪ್ರಕಾರದ ಓದುಗರ ಆಯ್ಕೆಯನ್ನು ಪೂರೈಸುವ, ಗೌರವಿಸುವ ಪ್ರಬುದ್ಧತನ.
Comments
Post a Comment