ಸುಮಾರು 2004-05 ರ ಸಮಯದಲ್ಲಿ ಅರಣ್ಯ ಇಲಾಖೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಮ್ಯಾಂಜಿಯಮ್ ಎಂಬ ಮಲೇಶಿಯಾ ಮೂಲದ ಗಿಡಗಳನ್ನು ಉಚಿತವಾಗಿ ಹಂಚಿತ್ತು. ನನಗಿನ್ನೂ ನೆನಪಿದೆ, ಗಿಡಗಳನ್ನು ಇಲಾಖೆಯ ನೌಕರರು ಎಷ್ಟು ಉತ್ಸಾಹದಿಂದ ಹಂಚಿದ್ದರೆಂದರೆ, ತಮ್ಮ ಈ ಮ್ಯಾಂಜಿಯಮ್ ನಿಂದ ಇಡೀ ಊರು ಉದ್ಧಾರವಾಗಿಬಿಡುತ್ತದೆಯೆಂಬಂತಾಡುತ್ತಿದ್ದರು.
ಹಲವಾರು ಜನ ನೆಟ್ಟರು. ನಾನೂ ನೆಟ್ಟೆ.
ನೇರವಾಗಿ ಎತ್ತರಕ್ಕೆ ಬೆಳೆದು ಹರಡಿಕೊಳ್ಳುವ ಈ ಮರ ತನ್ನ ಕಾಲಬುಡದಲ್ಲಿ ಅದರಪ್ಪನಾಣೆಗೂ ಒಂದೇ ಒಂದು ಲಂಟಾನದ ಗಿಡವನ್ನೂ ಸಹ ಬೆಳೆಯಲು ಆಸ್ಪದ ಕೊಡಲಿಲ್ಲ. ತನ್ನ ವ್ಯಾಪ್ತಿಯ ಸುತ್ತಾ ಮಳೆಗೆ ಕೊಳೆಯದ, ಬಿಸಿಲಿಗೆ ಮಣ್ಣಾಗದ ಪ್ಲಾಸ್ಟಿಕ್ ನ ಸೋದರನಂತಹ ಎಲೆಯನ್ನುದುರಿಸುತ್ತಾ ಹಾಯಾಗಿ ತೂಗಾಡುತ್ತಾ ನಿಂತಿತು. ಯಾವತ್ತಿಗೂ ಒಂದು ಹಣ್ಣನ್ನು ಬಿಡದ, ಹೂವನ್ನೂ ಸೃಷ್ಟಿಸದ ಹಕ್ಕಿಗಳಿಗಾಗಿ ರೆಂಬೆಯನ್ನೂ ಚಾಚದ ಬಿಕನಾಸಿ ಮರ ಅರಣ್ಯ ಇಲಾಖೆಗೆ ಕಲ್ಪವೃಕ್ಷದಂತೆ ಕಂಡಿದ್ದು ಮಾತ್ರ ಈ ಶತಮಾನದ ಕೌತುಕ.!
ಗಿಡ ಅತಿ ವೇಗವಾಗಿ ಬೆಳೆದು ಆರು ತಿಂಗಳೊಳಗೆ ಆರಡಿ ದಾಟಿತು. ಏಳನೆ ತಿಂಗಳು ತುಂಬುವ ಹೊತ್ತಿಗೆ " ಮ್ಯಾಂಜಿಯಮ್ ಪರಿಸರಕ್ಕೆ ಧಕ್ಕೆ ತರುವ ಜಾತಿಯಾಗಿರುವುದರಿಂದ ಯಾರೂ ಕೂಡಾ ಬೆಳೆಯಬಾರದು" ಎಂಬ ಆದೇಶವೊಂದು ಸರ್ಕಾರದಿಂದ ಹೊರಬಿತ್ತು.! ನಾನು ಮ್ಯಾಂಜಿಯಮ್ ಬಿಟ್ಟು ಬೇರೇನೂ ಬೆಳೆಯುವುದಿಲ್ಲ ಎಂದು ಗೋಳು ಹುಯ್ಯುತ್ತಾ ಯಾವನು ತಾನೆ ಇವರ ಕಛೇರಿ ಬಾಗಿಲಿಗೆ ಹೋಗಿದ್ದ. !?
ನಾನು ಬೇಲಿ ಕಡಿಯುವಾಗ ಮ್ಯಾಂಜಿಯಮನ್ನೂ ಸೇರಿಸಿ ಕಡಿದು ಹಾಕಿದೆ. ಆದರೆ ಒಂದಷ್ಟು ಜನ ಪಾಪ ಜತನವಾಗಿ ಬೆಳೆಸಿದ ಊರುಹಾಳು ಮರಗಳು ಈಗಲೂ ಕೆಲವರ ಮನೆಬಾಗಿಲಿನಲ್ಲಿವೆ.
ತಾವೇ ವಿತರಿಸಿ ತಾವೇ ಬೆಳೆಯಲು ಪ್ರೋತ್ಸಾಹಿಸಿದ ಆರೇ ತಿಂಗಳಿಗೆ ತಾವೇ ಬೆಳೆಯುವುದನ್ನು ನಿಷೇಧಿಸಿದ ಘನ ಅರಣ್ಯ ಇಲಾಖೆಯ , ಅದರ ಮೇಲಿನ ಸರ್ಕಾರದ ಒಳನಿಲುವು ಏನಿದ್ದಿರಬಹುದೆಂದು ನಾನು ಬಿಡಿಸಿ ಹೇಳಬೇಕಿಲ್ಲವಲ್ಲ.!
ಹೀಗೆ ಬಿರುಗಾಳಿಯಂತೆ ಬಂದುಹೋದ ಪ್ಲಾಸ್ಟಿಕ್ ಮರ ಮತ್ತಾರೂ ಅಲ್ಲ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಲನವೆಬ್ಬಿಸಿರುವ ಅಕೇಷಿಯಾದ ಅಣ್ತಮ್ಮ.
ಅವತ್ತ್ಯಾವನೋ ಸರ್ಕಾರದವನು ಶಿವಮೊಗ್ಗ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ಮಾಡುತ್ತೇವೆಂದು ಒದರುತ್ತಿದ್ದ. ಆ ಮಂಕಿ ಪಾರ್ಕಿನೊಳಗೆ ಮೊದಲು ಇವನಂತವನನ್ನು ಕೂಡಿಹಾಕಬೇಕು.
ಇಡೀ ನೈಸರ್ಗಿಕ ಕಾಡನ್ನು ಬಗೆದು ತಿಂದು ಅಲ್ಲೆಲ್ಲಾ ಏಕಜಾತೀಯ ಅಕೇಸಿಯಾವನ್ನು ನೆಟ್ಟು ದಶಕಗಳ ಕಾಲ ಮಂಗ ಹಾಗೂ ಆ ನೈಸರ್ಗಿಕ ವ್ಯವಸ್ಥೆಯನ್ನೇ ನಂಬಿಕೊಂಡಿದ್ದ ಜೀವಿಗಳಿಗೆ ತಿನ್ನಲು ಒಂದೇ ಒಂದು ಹಣ್ಣೂ ಸಿಗದಂತೆ ಮಾಡಿ ಒಂದಿಡೀ ಜೀವವೈವಿಧ್ಯವನ್ನೇ ಕೊಂದವರು ಆ ಪಾಪವನ್ನು ತೊಳೆದುಕೊಳ್ಳುವ ಸಲುವಾಗಿ ಈಗಲಾದರೂ ನೈಸರ್ಗಿಕ ಅರಣ್ಯ ಬೆಳೆಸುವ ಕಡೆಗೆ ಆಲೋಚಿಸದೇ ಮಂಕಿ ಪಾರ್ಕ್ ಮಾಡುತ್ತಾರಂತೆ.! ಇದೀಗ ಈ ಬಿಕನಾಸಿಗಳು ಮತ್ತೆ ನಲವತ್ತು ವರ್ಷ ಲೀಸ್ ಅವಧಿ ವಿಸ್ತರಿಸಲು ಹೊರಟಿರುವುದು ನಾವೆಂತಹಾ ತಲೆಹಿಡುಕರಿಗೆ ಅಧಿಕಾರ ಕೊಟ್ಟಿದ್ದೇವೆ ಎಂಬ ಕಹಿ ಸತ್ಯವನ್ನು ಸಾರಿ ಸಾರಿ ಹೇಳುತ್ತಿದೆ.
ಇದೇ ವಿಚಾರವಾಗಿ ಸಂಜೆ ಶ್ರೀಧರಣ್ಣನೊಂದಿಗೆ ಮಾತನಾಡುತ್ತಿದ್ದೆ. ಅವರು ' ಮಲೆನಾಡಿನ ರಾಜಕಾರಣಿಗಳು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದ್ದಾರೆ' ಎಂದರು.
ರಾಜಕಾರಣಿಗಳಷ್ಟೇ ಅಲ್ಲ, ಒಂದಷ್ಟು ಕನಿಷ್ಟ ಸಂಖ್ಯೆಯ ಜನರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಸಂವೇದನೆ ಕಳೆದುಕೊಂಡು ಬದುಕುತ್ತಿದ್ದಾರೆ ಎಂದೆ.
Comments
Post a Comment