ಎರಡು ವರ್ಷಗಳ ಹಿಂದೆ ನಾವು ವಿರಾಜಪೇಟೆಯಿಂದ ಇರಿಟ್ಟಿ ಎನ್ನುವ ಕೇರಳದ ಗಡಿಭಾಗದ ಊರಿಗೆ ಹೋಗಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಎಲ್ಲಿ ನೋಡಿದರಲ್ಲಿ ಗುಡ್ಡ , ಕಾಡು ಕಡಿದು ಕಟ್ಟಡಗಳ ನಿರ್ಮಾಣ, ಗೆರೆ ಅಗೆದು ರಸ್ತೆ ಅಗಲೀಕರಣ, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಕಣಿವೆಗೆ ರಸ್ತೆ ವಿಸ್ತರಣೆಯ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಕಣಿವೆಯಾಚೆಗಿನ ಗುಡ್ಡವನ್ನು ಇನ್ಯಾವುದೋ ಕಾಮಗಾರಿಗಾಗಿ ಜೆಸಿಬಿಗಳು ಬಗೆಯುತ್ತಿದ್ದವು. ಇನ್ನೊಂದು ಬದಿಯಲ್ಲಿ ರಬ್ಬರ್ ತೋಟಗಳು. ನದಿಯ ಕಣಿವೆಯ ಅಂಚಿಗೇ ಮನೆಗಳು, ಅಂಗಡಿ-ಹೋಟೆಲುಗಳು. ಒಟ್ಟಾರೆಯಾಗಿ ಆ ಇಡೀ ಪರಿಸರ ಒಂದು ರೀತಿಯ ಕೃತಕ ನಿರ್ಮಾಣದ ಧಾವಂತಕ್ಕೆ ಬಿದ್ದಂತೆ ತೋರುತ್ತಿತ್ತು.
ಕೇರಳದ ಆ ಊರು ಮನುಷ್ಯನ ಕೈಚಳಕಕ್ಕೆ ಸಿಕ್ಕಿ ಚಿತ್ರವಿಚಿತ್ರ ರೂಪ ಪಡೆಯುತ್ತಿರುವ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಗೋಚರವಾಗುತ್ತಿತ್ತು.
ಇವತ್ತು ಮಾನವ ಕೇಂದ್ರಿತ ವ್ಯವಸ್ಥೆಯು ಪ್ರಕೃತಿಯ ಮೇಲೆ ಹೊಸ ಹೊಸಾ ಆವಿಷ್ಕಾರಗಳ ಪ್ರಯೋಗಗಳನ್ನು ಎಗ್ಗಿಲ್ಲದೇ ನಡೆಸುತ್ತಿದೆ.
ಇದೊಂತರಾ ತಾಯಿಯ ಎದೆಯೊಳಗೆ ಕೃತಕ ಹಾಲನ್ನು ಸಿರಿಂಜಿನ ಮೂಲಕ ಒಳಸೇರಿಸಲು ಪ್ರಯತ್ನಿಸಿದಂತೆ.!
ಇದಕ್ಕೆ ಆಧುನಿಕ ವಿಜ್ಞಾನ ಎಂದು ಹೆಸರು.!
ಇದರ ಹೆಸರಿನಲ್ಲಿಯೇ ಭೂ ರಚನೆಯ ವಿರುದ್ಧವಾಗಿ ರಸ್ತೆ, ಕೆನಲ್ , ಸುರಂಗ ಮಾರ್ಗ, ಅತಿ ಭಾರದ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ನಡೆಸಿ ನೀರಿನ ನೈಸರ್ಗಿಕ ಹರಿವಿನ ದಿಕ್ಕಿಗೆ ತಡೆ ಕಟ್ಟಲಾಗುತ್ತದೆ.
ನಿರಂತರವಾಗಿ ರಾಸಾಯನಿಕ ಔಷಧಿಗಳನ್ನು ಕೃಷಿಗೆ ಸಿಂಪಡಿಸುವ ಮೂಲಕ ಮಣ್ಣಿನ ಮೇಲ್ಪದರದ ಶಕ್ತಿಯನ್ನು ಕೊಲ್ಲಲಾಗುತ್ತದೆ.
ಎಲ್ಲೆಂದರಲ್ಲಿ ಕಾಡುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವ ಮೂಲಕ ಭೂ ಸವಕಳಿಗೆ ಅನುವು ಮಾಡಿಕೊಡಲಾಗುತ್ತದೆ.
ನದಿ ಪಾತ್ರದಲ್ಲಿ, ನೀರಿನ ಒರತೆಯಿರುವ ಪ್ರದೇಶದಲ್ಲಿ, ಗದ್ದೆಯಂತಹ ಜೌಗು ಪ್ರದೇಶದಲ್ಲಿ ಲೇಯೌಟ್ ಸೃಷ್ಟಿಸಲಾಗುತ್ತದೆ. ಎತ್ತರದ ಇಳಿಜಾರಿನ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ.
ಇವೆಲ್ಲವೂ ಆಧುನಿಕ ನಾಗರಿಕ ವ್ಯವಸ್ಥೆಯ ಅವೈಜ್ನಾನಿಕ ರೆಂಬೆ-ಕೊಂಬೆಗಳು.
ಇವೆಲ್ಲದರ ಒಟ್ಟು ಮೊತ್ತವನ್ನೇ ನಾವಿವತ್ತು ಪಶ್ಚಿಮಘಟ್ಟದ ಸೆರಗಿನಲ್ಲಿರುವವರು ಅನುಭವಿಸುತ್ತಿರುವುದು.
ಅಸಲಿಗೆ ಪ್ರಕೃತಿಯೇ ಒಂದು ವಿಜ್ಞಾನ. ಅದರ ಮುಂದೆ ಮನುಷ್ಯ ನಿರ್ಮಿಸಿದ್ದೆಲ್ಲಾ ಆಟಿಕೆಗೆ ಸಮ.
ಪ್ರಕೃತಿ ತನಗೆ ಬೇಕಾದಂತೆ ತನ್ನನ್ನು ರಚನೆ ಮಾಡಿಕೊಂಡಿದೆ. ಅದನ್ನು ಮನುಷ್ಯ ಮರುನಿರ್ಮಿಸುತ್ತೇನೆ ಮಾರ್ಪಡಿಸುತ್ತೇನೆ ಎನ್ನುವುದರಷ್ಟು ಮೂರ್ಖತನ ಮತ್ತೊಂದಿಲ್ಲ.!
ನಾವು ನಿರ್ಮಾಣದ ಹೆಸರಿನಲ್ಲಿ ಪ್ರಾಕೃತಿಕ ಚಲನೆಯನ್ನು ವಿರೂಪಗೊಳಿಸುತ್ತಾ ಬಂದೆವು. ಪ್ರಕೃತಿ ತಾಳ್ಮೆಯ ತುತ್ತತುದಿ ತಲುಪಿದ ನಂತರ ಎಲ್ಲವನ್ನೂ ಕಿತ್ತೊಗೆಯುತ್ತಾ ಬಂತು.
ಈ ನೆರೆ, ಪ್ರವಾಹಕ್ಕೆಲ್ಲಾ ನದಿ ತಿರುವು ಮಾಡುವುದೇ ಸೂಕ್ತ ಪರಿಹಾರ ಎಂದು ಮೊನ್ನೆ ಒಬ್ಬರು ಚರ್ಚಿಸುತ್ತಿದ್ದರು. ನನಗೆ ನಗುಬಂತು. ಸಮುದ್ರಕ್ಕೆ ಸೇರುವ ವ್ಯರ್ಥ ನೀರನ್ನು ತಿರುಗಿಸುತ್ತೇವೆ ಎನ್ನುವುದೇ ಪರಮ ಮೂರ್ಖತನ.! ನದಿಯ ನೀರು ಸಮುದ್ರವನ್ನು ಸೇರಲೇಬೇಕು ಅದೇ ನೈಸರ್ಗಿಕ ಸಮತೋಲನ ವ್ಯವಸ್ಥೆ.
ನದಿ ಸಮುದ್ರ ಸೇರುವುದು ವ್ಯರ್ಥ ಎಂಬುದನ್ನು ಕಂಡುಹಿಡಿದವರು ಯಾರು !?
ಪ್ರಕೃತಿ ಸಾಕುನಾಯಿಯಂತಹದ್ದು. ವಿಪರೀತ ತಾಳ್ಮೆ, ನಿಯತ್ತು.
ನಾವು ಸಾಕಿದ ನಾಯಿಯನ್ನು ಕೆಡವಿಕೊಂಡು ಕಿರುಕುಳ ಕೊಡಲು ಪ್ರಾರಂಭಿಸಿದರೆ ಅದು ಎಷ್ಟು ಹೊತ್ತು ಸಹಿಸೀತು... !? ಅರ್ಧ ಗಂಟೆ. ? ಒಂದು ಗಂಟೆ ? ಎರಡು ಗಂಟೆ ? ಆ ನಂತರವೂ ಕಿರುಕುಳ ಮುಂದುವರೆದರೆ ನಿಯತ್ತಿನ ನಾಯಿಯೂ ತಿರುಗಿ ಬಾಯಿ ಹಾಕೀತು.!
ಪ್ರಕೃತಿ ಈಗ ತಿರುಗಿ ಬಿದ್ದಿರುವುದೂ ಹೀಗೆಯೇ...!
ಪಶ್ಚಿಮಘಟ್ಟದ ಸೆರಗು ಕಂಡು ಕೇಳರಿಯದ ಅವಘಡಕ್ಕೆ ಪದೇ ಪದೇ ತುತ್ತಾಗುತ್ತಿರುವುದಕ್ಕೆ ಇವೆಲ್ಲಾ ಚಟುವಟಿಕೆಗಳೇ ಕಾರಣ.
Very well described 👏👏
ReplyDelete