Skip to main content

ಅಂತರಂಗದ ಕೊಳಕಿಗೆ ಬಹಿರಂಗದಲ್ಲಿ ಮದ್ದಿಲ್ಲ...!

ಇತ್ತೀಚೆಗೆ  ತಾರತಮ್ಯದ ಕುರಿತಾಗಿ ಒಂದು ಚರ್ಚೆ. 
ಹಿಂದಿನ ಕಾಲದಲ್ಲಿ ಮೇಲ್ಜಾತಿಯವರು ಕೆಳಜಾತಿಯವರಿಗೆ ಕುರೂಪಿ ಹೆಸರುಗಳನ್ನಿಡುತ್ತಿದ್ದರು ಎಂಬುದು ಚರ್ಚೆಯ ವಸ್ತು. 
ಬ್ರಾಹ್ಮಣರು ತಮ್ಮ ಮಕ್ಕಳಿಗಾದರೆ ಶ್ಯಾಮ, ವಿನಾಯಕ, ಗಣೇಶ, ರಾಘವೇಂದ್ರ, ಮಂಜುನಾಥ ಎಂದೆಲ್ಲಾ ಚೆಂದದ ಹೆಸರಿಟ್ಟು, ತಮ್ಮಲ್ಲಿಗೆ ನಾಮಕರಣದ ಮನವಿ ಹೊತ್ತು ಬರುತ್ತಿದ್ದ ತಮಗಿಂತಾ ಕೆಳಜಾತಿಯವರಿಗೆ ಸಣ್ಣೇಗೌಡ, ದೊಡ್ಡೇಗೌಡ, ಗಿಡ್ಡೇಗೌಡ, ಉದ್ದೇಗೌಡ ಎಂಬುದಾಗಿಯೂ, ಬಂದವರು ದಲಿತರಾಗಿದ್ದಲ್ಲಿ ಕರಿಯ, ಬಿಳಿಯ, ಸಣ್ಣ, ದೊಡ್ಡ ಅಂತಲೂ ಹೆಸರು ಸೂಚಿಸುತ್ತಿದ್ದರು ಹೀಗಾಗಿ ನಮಗೆಲ್ಲಾ ಕೆಟ್ಟ ಹೆಸರು ಅವರಿಗೆ ಮಾತ್ರ ಚೆಂದದ ಹೆಸರು. ಇದೂ ಕೂಡಾ ಜಾತಿ ತಾರತಮ್ಯದ ಒಂದು ಶೋಷಣೆ ಎಂಬುದು ಅವತ್ತಿನ ಚರ್ಚೆ. 
ಇರಬಹುದೇನೋ... ಆದರೆ ಇವತ್ತಿನ ಕಾಲಕ್ಕೆ ಆ ವಾದ ಅಪ್ರಸ್ತುತ. ಕಾರಣ, ಈಗ ಬಹುತೇಕರು ತಮ್ಮ ಮಕ್ಕಳಿಗೆ ಅವರವರೇ ಹೆಸರಿಟ್ಟುಕೊಳ್ಳುತ್ತಾರೆ ಮತ್ತು ಚೆಂದದ ಹೆಸರಿಟ್ಟುಕೊಳ್ಳುತ್ತಾರೆ. ಕೆಲವು ಹೆಸರುಗಳಿಗಂತೂ ಯಾವ ವ್ಯಾಕರಣ ಗ್ರಂಥ ಹುಡುಕಿದರೂ ಅರ್ಥ ಸಿಗಲಾರದು.! 
ಇನ್ನು ಕೆಲವು ಹೆಸರುಗಳು ಕೇಳಿದ ಐದು ನಿಮಿಷಕ್ಕೆ ಮರೆತೇ ಹೋಗಿಬಿಡುತ್ತವೆ. ಮತ್ತೆ ಕೆಲವು ಉಚ್ಚರಿಸಲೇ ಹರಸಾಹಸ ಪಡಬೇಕು.
ಹೀಗಾಗಿ ಈಗ ಕರಿಯ, ಬಿಳಿಯ, ಗಿಡ್ಡ ಎಂಬ ಹೆಸರುಗಳೆಲ್ಲಾ ಇತಿಹಾಸ ಸೇರಿಕೊಳ್ಳುತ್ತಿವೆ. 

ಬ್ರಾಹ್ಮಣರು ಅದೆಷ್ಟು ಮಕ್ಕಳಿಗೆ ಹೆಸರಿಟ್ಟರೋ ತಿಳಿಯದು, ಆದರೆ ನಮ್ಮಲ್ಲಿ ಮೇಲ್ಜಾತಿಯ ಕೆಲವು ಹಳೆಯ ತಲೆಗಳು ತಮ್ಮಲ್ಲಿಗೆ ಕೂಲಿಗೆ ಬರುವ ಕೆಳ ಜಾತಿಯ ಮಕ್ಕಳಿಗೆ ಚೆಂದದ ಹೆಸರೇನಾದರೂ ಇಟ್ಟರೆ ವಿಪರೀತ ಉರಿದುಕೊಳ್ಳುತ್ತಿದ್ದರು. ' ಅಯ್ಯಾ ಇವ್ರ್  ಸೊಡ್ಡಿಗೆ ನಮ್ ಮಕ್ಳ ಹೆಸ್ರೆಲ್ಲಾ ಕೆಳ್ ಜಾತಿಯವು ಇಟ್ಕಳಂಗಾಯ್ತು' ಅಂತಲೂ ಕೂಲಿ ಕಾರ್ಮಿಕರೋ, ಅವರ ಮಕ್ಕಳೋ ಅಪರೂಪಕ್ಕೆ ಚೆಂದದ ಬಟ್ಟೆ ಧರಿಸಿದರೆ ' ತಿನ್ನಕ್ ಗತಿಯಿಲ್ಲ ಇವ್ ಹಿಂಡು ಶೋಕಿ ನೋಡ್ರಾ...' ಎಂದು ಮೂದಲಿಸುತ್ತಿದ್ದರು. ಇವೆಲ್ಲಾ ನಾವು ನಿತ್ಯ ನೋಡುತ್ತಿದ್ದ ಸಂಗತಿಗಳು. 
ಈ ರೀತಿಯ ಮೂದಲಿಕೆಗಳು ಸರ್ವವ್ಯಾಪಿ. ಬಣ್ಣದಿಂದ, ಜಾತಿಯಿಂದ, ಆಕಾರದಿಂದ , ಆರ್ಥಿಕ ಸ್ಥಿತಿಯಿಂದ, ವರ್ತನೆಯಿಂದ ಎದುರಿಗಿರುವವನನ್ನು ತೂಗುವ , ಅಳೆಯುವ, ಹೀಗಳೆಯುವ, ಓಲೈಸುವ ಮನುಷ್ಯನ ದುರ್ಬುದ್ದಿ ಕೇವಲ ಒಂದು ವರ್ಗಕ್ಕೋ, ಪ್ರದೇಶಕ್ಕೋ, ದೇಶಕ್ಕೋ ಸೀಮಿತವಲ್ಲ. ಅದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವ ಕೊಳಕು ಪಾಚಿ. ಆ ಪಾಚಿ ಮನುಷ್ಯನ ತಲೆಯೊಳಗೆ ಹುಟ್ಟಿ ಬೆಳೆದು  ಚಾಚಿಕೊಳ್ಳುವುದರಿಂದ ಅದನ್ನು ಹೊರಗಿನಿಂದ ತಿಕ್ಕಿ ತೊಳೆಯುವುದು ಅಸಾಧ್ಯ.
 ಅಮೇರಿಕಾದಂತಹ ಅತೀ ಮುಂದುವರೆದ ನಾಗರಿಕ ದೇಶದಲ್ಲೂ ಕಪ್ಪಗಿನ ಜನರನ್ನು ಹೀನವಾಗಿ ನೋಡಲಾಗುತ್ತದೆ. ಅವರ ಮೇಲೆ ಕ್ರೌರ್ಯವನ್ನು ಮೆರೆಯುತ್ತಾರೆ. ಹೀಗಿರುವಾಗ ಜಾತಿ, ವರ್ಣದ ಕೂಪದಲ್ಲೇ ಬಿದ್ದು ಹೊರಳಾಡುವ ನಾವು  ಇವುಗಳಿಂದ ಅತೀತರಾಗುವುದು ಹೇಗೆ ಸಾಧ್ಯ!? ನಾವು  ಈ ತಾರತಮ್ಯ, ಅವಗುಣಗಳ ಗೋಡೆಯನ್ನು ದಾಟಲು ಬಯಸಿದರೂ ಕೂಡಾ ಬಹುತೇಕ ಸಂದರ್ಭಗಳಲ್ಲಿ ನಮ್ಮೊಳಗಿನ ಅಸೂಯೆ, ಸಣ್ಣತನಗಳು ನಮ್ಮನ್ನು ದಾಟಲಾಗದಂತೆ ತಡೆದು ನಿಲ್ಲಿಸುತ್ತವೆ. ಹೀಗಾಗಿ ದಾಟಬಹುದಾದ ಗೋಡೆಯೆದುರೂ ನಾವು ಕುಬ್ಜರಾಗಿ ನಿಂತುಬಿಡುತ್ತೇವೆ. ಗೋಡೆ ದೈತ್ಯಾಕಾರವಾಗಿ ಗಹಗಹಿಸುತ್ತದೆ. 
ಯಾವನೋ ನಮಗೆ ಸಂಬಂಧವೇ ಇಲ್ಲದ ನಮ್ಮ ಕಣ್ಣಳತೆಯಲ್ಲಿ ಓಡಾಡುತ್ತಿದ್ದವನು ಯಾವತ್ತಾದರೂ ಆರ್ಥಿಕವಾಗಿಯೋ, ಮತ್ಯಾವ ರೀತಿಯಲ್ಲೋ ಒಂಚೂರು ಚಿಗಿತುಕೊಂಡರೆ ನಮ್ಮೊಳಗಿನ ಅಸೂಯೆಗೆ ಸಣ್ಣದಾಗಿ ಕಿಡಿ ಬಿದ್ದು ಹೊಗೆಯಾಡತೊಡಗುತ್ತದೆ. ' ನನ್ಮಗ ಹೆಂಗಿದ್ದೋನು ಹೆಂಗಾದ ಮಾರಾಯಾ...' ಎಂದು ನಮ್ಮೊಳಗಿನ ಹೊಗೆಯನ್ನು ಅಲ್ಲಲ್ಲಿ ಹೊರಹಾಕತೊಡಗುತ್ತೇವೆ. 
ನಮ್ಮ ಕುಟುಂಬದವನೇ ಯಾವನಾದರೊಬ್ಬ ಬೆಳೆದುಬಿಟ್ಟರೆ, ಹೆಣ್ಣುಮಗಳೊಬ್ಬಳು ದುಡ್ಡಿರುವವನನ್ನು ಮದುವೆಯಾದರೆ, ಪಕ್ಕದ ಮನೆಯವನು ಕಾರು ಕೊಂಡರೆ, ಬಡ ಹುಡುಗನೋ, ಕೂಲಿ ಕಾರ್ಮಿಕನ ಮಗನೊಬ್ಬ ಉನ್ನತ ಶಿಕ್ಷಣ ಪಡೆದರೆ,  ಮತ್ಯಾವನೋ ಒಂದಷ್ಟು ಎತ್ತರಕ್ಕೇರಿದರೆ ನಮ್ಮೊಳಗಿನ ಸಣ್ಣತನಕ್ಕೆ ಬೆಂಕಿ ಬೀಳುತ್ತದೆ. ಇನ್ನು ಕೆಲವರಂತೂ ಮತ್ತೊಂದಷ್ಟು ಮುಂದೆ ಹೋಗಿ ಆತನಿಗೇನಾದರೂ ಕೇಡು ಮಾಡಬಹುದಾ ಎಂಬ ರಹಸ್ಯ ಪ್ರಯತ್ನಕ್ಕೆ ಬೀಳುತ್ತಾರೆ. 
ಇವೆಲ್ಲಾ ಜಾತಿಯಿಂದ ಬಂದಂತಹವಲ್ಲ, ಹುಟ್ಟಿನಿಂದ ಬಂದಂತಹ ನೀಚಗುಣಗಳು. ಇವಕ್ಕೆ ಹೊರಗೆಲ್ಲೂ ಮದ್ದಿಲ್ಲ. 
ನಮ್ಮ ಅಂತರಂಗ ಶುದ್ಧಿಯನ್ನು ನಾವೇ ಕೈಗೊಳ್ಳಬೇಕು.

Comments

Popular posts from this blog

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...