ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...? ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ. ಎರಡನೇ ಮುಖ್ಯ...